2025, Vol. 11 Issue 2, Part B
ಗ್ರಾಮೀಣ ಜನರ ಸಾಮಾಜಿಕ ಜೀವನದ ಮೇಲೆ ಮರಳು ಗಣಿಗಾರಿಕೆಯ ಪ್ರಭಾವ
Author(s): ಡಾ. ಗಂಗಾಧರ ರೆಡ್ಡಿ ಎನ್, ಡಾ. ಲೋಕೇಶ ಎಂ.ಯು, ಶ್ವೇತಾ ಜಿ.
Abstract: ಹೆಚ್ಚಾಗುತ್ತಿರುವ ಜನಸಂಖ್ಯೆ, ಕ್ಷಿಪ್ರ ನಗರೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಅಧಿಕವಾಗುತ್ತಿರುವ ಜಾಗತಿಕ ಹೂಡಿಕೆಯ ಪರಿಣಾಮದಿಂದ ನಿರ್ಮಾಣ ಸಾಮಗ್ರಿಗಳ ಬೇಡಿಕೆ ವಿಶ್ವಾದ್ಯಂತ ತೀವ್ರಗತಿಯಲ್ಲಿ ಏರುತ್ತಿದೆ. ಮರಳು, ನಿರ್ಮಾಣ ಸಾಮಗ್ರಿಗಳಲ್ಲಿ ಪ್ರಮುಖ ಕಚ್ಛಾವಸ್ತುವಾಗಿದ್ದು, ನಿರಂತರವಾಗಿ ಹೆಚ್ಚಾಗುತ್ತಿರುವ ಬೇಡಿಕೆಯನ್ನು ಪೂರೈಸಲು ಅದನ್ನು ಯೆಥೇಚ್ಛವಾಗಿ ಹೊರತೆಗೆಯಲಾಗುತ್ತಿದೆ. ಭೂಮಿಯ ಮೇಲಿನ ಅತ್ಯಮೂಲ್ಯ ನಿರ್ಜಿವ ಸಂಪನ್ಮೂಲವಾದ ಮರಳು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದಾಗ್ಯೂ, ಭೂಮಿಯ ಮೇಲ್ಪದರದ ವೈವಿಧ್ಯಮಯ ಪರಿಸರ ವ್ಯವಸ್ಥೆಗಳಿಂದ ಮರಳನ್ನು ವಿವೇಚನಾರಹಿತವಾಗಿ ಹೊರತೆಗೆಯಲಾಗುತ್ತಿದೆ. ಹೀಗೆ ಅನಿಯಂತ್ರಿತವಾಗಿ ಜರುಗುತ್ತಿರುವ ವಿವೇಚನಾರಹಿತ ಮರಳು ಗಣಿಗಾರಿಕಾ ಚಟುವಟಿಕೆಗಳು ಮೂಲ ಪರಿಸರ ವ್ಯವಸ್ಥೆಯ ಅವನತಿಗೆ ಕಾರಣವಾಗುತ್ತಿವೆ ಹಾಗೂ ನೈಸರ್ಗಿಕ ಪ್ರಕ್ರಿಯೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಪ್ರಸ್ತುತ ಮರಳು ಗಣಿಗಾರಿಕೆ ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಜರುಗುತ್ತಿದ್ದು ಹಲವಾರು ಸಾಮಾಜಿಕ-ಆರ್ಥಿಕ ಹಾಗೂ ಪರಿಸರ ಪರಿಣಾಮಗಳಿಗೆ ಕಾರಣವಾಗಿದೆ ಎಂಬುದನ್ನು ಹಲವಾರು ಸಂಶೋಧನೆಗಳು ಸಾಬೀತುಪಡಿಸಿವೆ. ಸಾಕಷ್ಟು ನಿಯಂತ್ರಕ ಕಾರ್ಯವಿಧಾನಗಳ ಹೊರತಾಗಿಯೂ ಭಾರತದಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ಜರುಗುತ್ತಿದ್ದು, ಇದೊಂದು ರಾಷ್ಟ್ರವ್ಯಾಪಿ ಸಮಸ್ಯೆಯಾಗಿ ಪರಿಣಮಿಸಿದೆ. ಕರ್ನಾಟಕ ಸರ್ಕಾರವು 2021ರ ನಂತರ ಮರಳು ಗಣಿಗಾರಿಕೆಯನ್ನು ಕಾನೂನುಬದ್ಧಗೊಳಿಸಿದ್ದು, ಗುರುತಿಸಲ್ಪಟ್ಟ ಸ್ಥಳಗಳಲ್ಲಿ ನಿರ್ದಿಷ್ಟಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಗಣಿಗಾರಿಕೆ ನಡೆಸಲು ಪರವಾನಿಗೆ ನೀಡಿದೆ. ಹಾಗಿದ್ದರೂ, ವಿವೇಚನಾರಹಿತವಾಗಿ ಜರುಗುತ್ತಿರುವ ಇಂತಹ ಚಟುವಟಿಕೆಗಳು ಗಣಿಗಾರಿಕಾ ಪೀಡಿತ ಸಮುದಾಯಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿವೆ. ಈ ಹಿನ್ನೆಲೆಯಲ್ಲಿ, ಮರಳು ಗಣಿಗಾರಿಕಾ ಪೀಡಿತ ಗ್ರಾಮೀಣ ಸಮುದಾಯಗಳ ಜನರ ಸಾಮಾಜಿಕ ಜೀವನದ ಮೇಲೆ ಗಣಿಗಾರಿಕಾ ಚಟುವಟಿಕೆಗಳ ಪರಿಣಾಮವನ್ನು ಅಧ್ಯಯನ ಮಾಡುವ ಉದ್ದೇಶದೊಂದಿಗೆ ಸದರಿ ಸಂಶೋಧನೆಯನ್ನು ಕರ್ನಾಟಕ ರಾಜ್ಯದ ನಾಲ್ಕು ಪ್ರಮುಖ ನದಿಪಾತ್ರಗಳಲ್ಲಿ ಕೈಗೊಳ್ಳಲಾಗಿದೆ. ಪ್ರಾಥಮಿಕ ದತ್ತಾಂಶಗಳೇ ಸದರಿ ಸಂಶೋಧನೆಯ ಜೀವಾಳವಾಗಿದ್ದು, ಕೇಂದ್ರೀಕೃತ ಗುಂಪು ಚರ್ಚೆಗಳ ಮೂಲಕ ಅಗತ್ಯ ದತ್ತಾಂಶಗಳನ್ನು ಕ್ರೋಢೀಕರಿಸಲಾಗಿದೆ. ಗಣಿಗಾರಿಕಾ ಪೀಡಿತ ಸಮುದಾಯಗಳಲ್ಲಿ ವಾಸಿಸುತ್ತಿರುವ ವಿವಿಧ ಫಲಾನುಭವಿಗಳು ಪ್ರಮುಖವಾಗಿ ರೈತರು, ಕೃಷಿ ಕೂಲಿಕಾರ್ಮಿಕರು, ಜನಪ್ರತಿನಿಧಿಗಳು ಮತ್ತು ಗಣಿಗಾರಿಕಾ ಚಟುವಟಿಕೆಗಳಲ್ಲಿ ಭಾಗಿಯಾದವರೊಂದಿಗೆ ನಡೆಸಿದ ಚರ್ಚೆಗಳ ವಿಶ್ಲೇಷಣಾ ಸಾರಾಂಶದ ಆಧಾರದ ಮೇಲೆ ಫಲಿತಾಂಶಗಳನ್ನು ಕ್ರೂಢೀಕರಿಸಲಾಗಿದೆ. ಮೂಲತಃ ಮರಳು ಗಣಿಗಾರಿಕಾ ಚಟುವಟಿಕೆಗಳು ವಿಧ್ವಂಸಕವಾಗಿದ್ದು, ಸ್ಥಳೀಯ ಸಸ್ಯವರ್ಗವನ್ನು ನಾಶಗೊಳಿಸುವುದರ ಜೊತೆಗೆ ಗ್ರಾಮೀಣ ಜನರ ಜೀವನೋಪಾಯ ಕಸುಬುಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತವೆ ಮತ್ತು ಸ್ಥಳೀಯರ ಸಾಮಾಜಿಕ ಹಾಗೂ ಆರ್ಥಿಕ ಜೀವನದ ಮೇಲೆ ವ್ಯತಿರಿಕ್ತ ಪ್ರಬಾವ ಬೀರುತ್ತವೆ ಎಂಬುದನ್ನು ಸಂಶೋಧನೆ ಸಾಬೀತುಪಡಿಸಿದೆ. ಈ ಚಟುವಟಿಕೆಗಳು ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಅಶಾಂತಿಯನ್ನು ಸೃಷ್ಟಿಸಿ, ಸಾಮುದಾಯಿಕ ಒಗ್ಗಟ್ಟನ್ನು ಕದಡುತ್ತವೆ ಹಾಗೂ ಸಮುದಾಯಗಳನ್ನು ಸಣ್ಣ-ಸಣ್ಣ ಗುಂಪುಗಳಾಗಿ ವಿಭಜಿಸುತ್ತವೆ. ಪರಿಣಾಮ ಸಾಂಪ್ರದಾಯಿಕ ಸಾಂಸ್ಕøತಿಕ ಚಟುವಟಿಕೆಗಳು ಮತ್ತು ಗ್ರಾಮೀಣ ಕ್ರೀಡೆಗಳಿಗೆ ಹಿನ್ನಡೆಯಾಗಿ ಕಾಲಕ್ರಮೇಣ ನಶಿಸಿಹೋಗುತ್ತಿರುವುದಕ್ಕೆ ಮರಳು ಗಣಿಗಾರಿಕಾ ಚಟುವಟಿಕೆಗಳಿಂದ ಉಂಟಾದ ಕಲಹಗಳೂ ಪ್ರಮುಖ ಕಾರಣ ಎಂಬುದನ್ನು ಸಂಶೋಧನೆ ದೃಢಪಡಿಸಿದೆ. ಮುಂದುವರೆದು, ಯುವಜನರು ಮಾದಕ ಪದಾರ್ಥಗಳ ವ್ಯಸನಗಳಿಗೆ ತುತ್ತಾಗುತ್ತಿರುವುದು, ಕೌಟುಂಬಿಕ ಕಲಹ, ಗ್ರಾಮೀಣ ವಲಸೆ, ಆರೋಗ್ಯ ಸಮಸ್ಯೆಗಳಂತಹ ಹತ್ತು ಹಲವು ಸಾಮಾಜಿಕ ಸಮಸ್ಯೆಗಳಿಗೆ ಗಣಿಗಾರಿಕಾ ಚಟುವಟಿಕೆಗಳು ಕಾರಣವಾಗುತ್ತಿರುವುದು ಕಂಡುಬಂದಿದೆ. ಇಂತಹ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ನಿಯಂತ್ರಣ ಪ್ರಾಧಿಕಾರಗಳು ಪೀಡಿತ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಣಿಗಾರಿಕಾ ನಿಯಂತ್ರಣ ಕಾರ್ಯವಿಧಾನಗಳಲ್ಲಿ ಸ್ಥಳೀಯರ ಭಾಗವಹಿಸುವಿಕೆಯನ್ನು ಖಾತರಿಪಡಿಸಬೇಕಿದೆ. ಸ್ಥಳೀಯವಾಗಿ ಲಭ್ಯವಾಗುವ ನೈಸರ್ಗಿಕ ಸಂಪನ್ಮೂಲಗಳ ಮಾಲೀಕತ್ವ ಹಾಗೂ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಸಮುದಾಯಗಳಿಗೆ ವಹಿಸಿದರೆ ಅವೈಜ್ಞಾನಿಕ, ಅನಿಯಂತ್ರಿತ ಹಾಗೂ ವಿವೇಚನಾರಹಿತ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯ.
Pages: 123-131 | 323 Views 65 Downloads